My photo
ಕರಾವಳಿ ಹುಡುಗಿ :)
Showing posts with label ಉಪಾಹಾರ/ Breakfast. Show all posts
Showing posts with label ಉಪಾಹಾರ/ Breakfast. Show all posts

Tuesday, December 8, 2009

ನೀರು ದೋಸೆ ಮತ್ತು ಸೌತೆಕಾಯಿ ದೋಸೆ (neer Dose & Southekayi Dose)

ನೀರು ದೋಸೆ ಮಂಗಳೂರಿಗರ ಫೇವರಿಟ್ ದೋಸೆ. ಇದರ ಹಿಟ್ಟು ಉಳಿದ ದೋಸೆ ಹಿಟ್ಟಿಗಿಂತ ತುಂಬಾ ತೆಳ್ಳಗಾಗಿರುವ ಕಾರಣ ಈ ಹೆಸರು. ಇನ್ನೊಂದು ವಿಶೇಷ ಎಂದರೆ ಇದನ್ನು ಅಕ್ಕಿ ರುಬ್ಬಿದ ತಕ್ಷಣವೇ ಮಾಡಬೇಕು.


ಸಾಮಗ್ರಿಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – ¼ ಕಪ್ (ತೆಂಗಿನ ತುರಿ ಸೇರಿಸದೆ ಕೂಡ ಮಾಡಬಹುದು)
ಉಪ್ಪು – ¾ ಚಮಚ / ರುಚಿಗೆ ತಕ್ಕಷ್ಟು
ನೀರು – 1 ½ ಕಪ್ ನಷ್ಟು

ವಿಧಾನ:

ಅಕ್ಕಿಯನ್ನು ಮುಳುಗವಷ್ಟು ನೀರಿನಲ್ಲಿ 6-8 ಗಂಟೆ ನೆನೆಸಿರಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ತೆಂಗಿನ ತುರಿ ಹಾಗು ½ ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ನಯವಾಗಿ ರುಬ್ಬಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗು 1 ಕಪ್ ನಷ್ಟು ನೀರು ಸೇರಿಸಿ ಹಿಟ್ಟನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.

ಎಣ್ಣೆ ಸವರಿದ ಕಾದ ಕಾವಲಿಯಲ್ಲಿ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ದೋಸೆಯನ್ನು ಮಾಡಬೇಕು. ಈ ದೋಸೆಯನ್ನು ಪುನ: ಮಗುಚಿ ಹಾಕುವ ಅಗತ್ಯ ಇರುವುದಿಲ್ಲ.

ಸಾಮಾನ್ಯವಾಗಿ, ನೀರುದೋಸೆ ಮಾಡುವಾಗ ಕಾವಲಿಯ ಒಂದು ಕೊನೆಯಲ್ಲಿ ಹಿಟ್ಟನ್ನು ಹಾಕಿ, ಕಾವಲಿಯನ್ನು ಕೈಯಿಂದ ಅಲ್ಲಾಡಿಸಿದರೆ ದೋಸೆಹಿಟ್ಟು ಇಡೀ ಕಾವಲಿಯಲ್ಲಿ ಹರಡಿಕೊಳ್ಳುತ್ತದೆ. ಈ ರೀತಿ ಮಾಡಲು ಹೊಸಬರಿಗೆ ಕಷ್ಟವಾದುದರಿಂದ, ದೋಸೆ ಹಿಟ್ಟನ್ನು ಮಧ್ಯದಲ್ಲಿ ಉಳಿದ ದೋಸೆಯಂತೆಯೇ ಹಾಕಿಕೊಂಡು ಮಾಡಬಹುದು. ಅದರ ಸಣ್ಣ ತುಣುಕನ್ನು ಈ ಕೊಂಡಿಯಲ್ಲಿ ನೋಡಬಹುದು.



A Variation : ಸೌತೆಕಾಯಿ ದೋಸೆ

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್

1 ಸಣ್ಣ ಸೌತೆಕಾಯಿ(=ಮುಳ್ಳುಸೌತೆಕಾಯಿ)
ಉಪ್ಪು – ರುಚಿಗೆ ತಕ್ಕಷ್ಟು
ನೀರು

ವಿಧಾನ :
ಎಳೆ ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಅಕ್ಕಿಯೊಂದಿಗೆ ರುಬ್ಬಿಕೊಂಡು, ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಬೇಕು. ಸೌತೆಕಾಯಿಯು ದೋಸೆಗೆ ಒಳ್ಳೆಯ ಪರಿಮಳ ಹಾಗು ರುಚಿಯನ್ನು ಕೊಡುತ್ತದೆ.

ಹೆಚ್ಚಾಗಿ ಈ ದೋಸೆಗಳನ್ನು ತೆಂಗಿನ ಕಾಯಿ ಚಟ್ನಿ, ಅಥವಾ ಕಾಯಿತುರಿ-ಬೆಲ್ಲದ ಮಿಶ್ರಣದೊಂದಿಗೆ ತಿನ್ನುವುದು ವಾಡಿಕೆ.

ಒಂದು ವರ್ಷದ ಹಿಂದೆ ಈ " ನನ್- ಪ್ರಪಂಚ" ವನ್ನು ಕುತೂಹಲ, ಉತ್ಸಾಹದಿಂದ ಶುರು ಮಾಡಿದ್ದೆ. ಇದು ನನಗೆ ಹಲವಾರು ಸಹೃದಯಿ ಬ್ಲಾಗ್ ಗೆಳೆಯರನ್ನು ಪರಿಚಯಿಸಿದೆ. ಈ ಮೂಲಕ ನನ್ನ ಸಣ್ಣ ಪ್ರಯತ್ನವು ಸ್ವಲ್ಪವಾದರೂ ಉಪಯೋಗವಾದಲ್ಲಿ ತುಂಬಾ ಸಂತೋಷ..ಇದುವರೆಗೆ ಪ್ರೋತ್ಸಾಹಿಸಿದ ಎಲ್ಲ ಆತ್ಮೀಯರಿಗೆ ನಾನು ಆಭಾರಿ. ಹಾಗೆಯೇ ಮುಂದೆಯೂ ಕೂಡ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ವನಿತಾ.

Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

Friday, July 10, 2009

ಪೂರಿ / ದೋಸೆ ಮತ್ತು ಆಲೂಗಡ್ಡೆ ಪಲ್ಯ (ಬಾಜಿ*)

ಪೂರಿ ಮಾಡಲು ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು
ಕರಿಯಲು ಎಣ್ಣೆ

ಗೋಧಿ ಹಿಟ್ಟಿಗೆ ಉಪ್ಪು ಹಾಕಿ ನೀರು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 20-30 ನಿಮಿಷ ಮುಚ್ಚಿ ಇಡಿ. ನಂತರ ಸಣ್ಣ ಸಣ್ಣ ಗೋಲಿಗಳನ್ನು ಮಾಡಿ ಸ್ವಲ್ಪ ಎಣ್ಣೆ ಸವರಿಕೊಂಡು ಚಪಾತಿ ಗಿಂತ ಸಣ್ಣಗೆ ಸ್ವಲ್ಪ ದಪ್ಪಕ್ಕೆ ಲಟ್ಟಿಸಿ ಕೊಳ್ಳಿ. ಇದನ್ನು ಹದ ಉರಿಯಲ್ಲಿ ಎಣ್ಣೆಯಲ್ಲಿ ಎರಡೂ ಬದಿ ಕರಿದರೆ ಪೂರಿ ರೆಡಿ.
ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 3 ಕಪ್
ಉದ್ದಿನಬೇಳೆ- 1 ಕಪ್
ಕಡಲೆಬೇಳೆ /ತೊಗರಿಬೇಳೆ - 2 ಚಮಚ
ಮೆಂತೆ - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 ಚಮಚ (ಬೇಕಿದ್ದರೆ ಮಾತ್ರ)
ಗಟ್ಟಿ ಅವಲಕ್ಕಿ - ¼ ಕಪ್ / ಒಂದು ಹಿಡಿಯಷ್ಟು
ಎಣ್ಣೆ ಅಥವಾ ತುಪ್ಪ - ದೋಸೆ ತಯಾರಿಸಲು ಬೇಕಾದಷ್ಟು

ಅಕ್ಕಿ ಹಾಗು ಬೇಳೆಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ 6-8 ಗಂಟೆ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನೆನೆಸಿದ ಉದ್ದಿನಬೇಳೆ, ಕಡಲೆಬೇಳೆ, ಮೆಂತೆ, ಹಾಗು ಅವಲಕ್ಕಿ (5-10 ನಿಮಿಷ ನೀರಿನಲ್ಲಿ ನೆನೆಸಿ ತೆಗೆದುಕೊಂಡು) ಯನ್ನು ಸೇರಿಸಿ ನಯವಾಗಿ ಅರೆದು ಒಂದು ದೊಡ್ಡ ಪಾತ್ರೆಗೆ ಹಾಕಿ. ನಂತರ ಅಕ್ಕಿ ಹಿಟ್ಟನ್ನು ಚೆನ್ನಾಗಿ ಅರೆದು, ಒಂದು ಚಮಚ ಉಪ್ಪು ಮತ್ತು ಸಕ್ಕರೆ ಸೇರಿಸಿ, ರುಬ್ಬಿದ ಉದ್ದಿನ ಹಿಟ್ಟಿನೊಂದಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8-10 ಗಂಟೆಗಳ ಕಾಲ ಮುಚ್ಚಿ ಇಡಬೇಕು.

ಮರುದಿನ ಬೆಳಗ್ಗೆ ಹೊತ್ತಿಗೆ ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ. ಇದಕ್ಕೆ ಬೇಕಿದ್ದಷ್ಟು ಉಪ್ಪು (ಬೇಕಿದ್ದರೆ ಸ್ವಲ್ಪ ನೀರು) ಹಾಕಿ ಕಲಸಿ ಹಿಟ್ಟು ಹದ ಮಾಡಿಕೊಳ್ಳಿ. ಬಳಿಕ ಕಾದ ಕಾವಲಿಗೆ ಎಣ್ಣೆ ಸವರಿ ದೋಸೆಯನ್ನು ಹುಯ್ಯಿದು ಎರಡೂ ಕಡೆ ಕೆಂಬಣ್ಣ ಬರುವತನಕ ಬೇಯಿಸಿದರೆ ದೋಸೆ ಸಿದ್ದ.

ಆಲೂಗಡ್ಡೆ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ - 2-3 (ಬೇಯಿಸಿ, ಸಣ್ಣಗೆ ತುಂಡು ಮಾಡಿದ್ದು)
ಈರುಳ್ಳಿ - 1-2 (ಸಣ್ಣಗೆ ಹೆಚ್ಚಿ)
ಟೊಮೇಟೊ - 2-3 (ಸಣ್ಣಗೆ ಹೆಚ್ಚಿ)
ಹಸಿಮೆಣಸು - 2-3 (ಉದ್ದಕ್ಕೆ ಸೀಳಿ)
ಶುಂಠಿ - ½ ಇಂಚು
ಹಳದಿ ಪುಡಿ - ಸ್ವಲ್ಪ
ಗರಂ ಮಸಾಲ - ½ ಚಮಚ (ಬೇಕಿದ್ದರೆ ಮಾತ್ರ)
ಒಗ್ಗರಣೆಗೆ - ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಬೆಳ್ಳುಳ್ಳಿ

ಒಂದು ಪಾತ್ರೆಯಲ್ಲಿ 3-4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿ ಯಾದ ನಂತರ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಗು ಬೆಳ್ಳುಳ್ಳಿ ಸೇರಿಸಿ, ಒಗ್ಗರಣೆ ಮಾಡಿಕೊಳ್ಳಿ. ಬೆಳ್ಳುಳ್ಳಿ ಕೆಂಪಗಾದ ನಂತರ ಈರುಳ್ಳಿ ಹಾಕಿ 5-10 ನಿಮಿಷ ಹುರಿಯಬೇಕು. ಇದಕ್ಕೆ ಹಳದಿ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ಟೊಮೇಟೊ ಸೇರಿಸಿ 5 ನಿಮಿಷ ಹುರಿಯಬೇಕು. ನಂತರ ಜಜ್ಜಿದ ಶುಂಠಿ ಹಾಗು ¼ ಕಪ್ ನೀರು ಸೇರಿಸಿ ಹದ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೇಯಿಸಿದ ಆಲೂಗಡ್ಡೆ ಸೇರಿಸಿ, ನಂತರ ಗರಂ ಮಸಾಲ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂಗಡ್ಡೆ ಪಲ್ಯ ಸಿದ್ದ.



*- ದಕ್ಷಿಣ ಕನ್ನಡ ಹಾಗು ಮಂಗಳೂರಿನಲ್ಲಿ ಆಲೂಗಡ್ಡೆ ಪಲ್ಯಕ್ಕೆ ಬಾಜಿ ಹಾಗು ಬೇರೆ ಕಡೆಗಳಲ್ಲಿ ಬಾಂಬೆ ಸಾಗು ಎಂದು ಕರೆಯುತ್ತಾರೆ.
(ತುಂಬ ಚಳಿ ಇದ್ದಾಗ ಹಿಟ್ಟು ಹುಳಿ ಬರದಿದ್ದಲ್ಲಿ, ಒಂದು ಪಾತ್ರೆಯಲ್ಲಿ (ಕುಕ್ಕರಿನಲ್ಲಿ) ಸ್ವಲ್ಪ ನೀರು ಬಿಸಿ ಮಾಡಿ ಹಿಟ್ಟಿನ ಪಾತ್ರೆಯನ್ನು ಅದರ ಒಳಗೆ ಇಟ್ಟು ಮುಚ್ಚಿಟ್ಟರೆ ಹಿಟ್ಟು ಚೆನ್ನಾಗಿ ಹುದುಗು ಬರುತ್ತದೆ.)