My photo
ಕರಾವಳಿ ಹುಡುಗಿ :)
Showing posts with label ಮಂಗಳೂರಿನ ತಿನಿಸುಗಳು / Mangalore Delicacy. Show all posts
Showing posts with label ಮಂಗಳೂರಿನ ತಿನಿಸುಗಳು / Mangalore Delicacy. Show all posts

Sunday, April 11, 2010

ತೊಂಡೆಕಾಯಿ - ಕಡ್ಲೆ ಪಲ್ಯ (ತುಳುವಿನಲ್ಲಿ ಕಡ್ಲೆ - ಮನೋಳಿ ಆಜಾಯಿನ)

ಇದು ಮಂಗಳೂರಿನ ಅದರಲ್ಲೂ ತುಳುವರ ಮನೆಯ ಮದುವೆ, ಹಬ್ಬಗಳಲ್ಲಿ ಇರಲೇಬೇಕಾದ ಖಾದ್ಯ. ತೊಂಡೆಕಾಯಿಗೆ ತುಳುವಿನಲ್ಲಿಮನೋಳಿ’ ಹಾಗೂ ಪಲ್ಯಕ್ಕೆಆಜಾಯಿನ/ಸುಕ್ಕ’ ಎಂದು ಕರೆಯುತ್ತಾರೆ. ಪಲ್ಯಕ್ಕೆ ತೆಂಗಿನ ತುರಿಯನ್ನು ಮಸಾಲೆಯೊಂದಿಗೆ ಧಾರಾಳವಾಗಿ ಬಳಸಲಾಗುತ್ತದೆ. ಅದರಲ್ಲೂವಿಷುಹಬ್ಬ’ದಂದು ಇದೇ ರೀತಿ ತೊಂಡೆಕಾಯಿ ಮತ್ತು ಎಳೆ ಹಸಿ ಗೇರುಬೀಜದೊಂದಿಗೆ ಸೇರಿಸಿ ಪಲ್ಯವನ್ನು ತಯಾರಿಸುತ್ತಾರೆ. ಈ ಪಲ್ಯ ತಿನ್ನಲು ತುಂಬ ರುಚಿ.


ಬೇಕಾಗುವ ಸಾಮಗ್ರಿಗಳು:

ತೊಂಡೆಕಾಯಿ - ಕಪ್ (1/2 kg, ಉದ್ದಕ್ಕೆ ಸೀಳಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಟೊಮೇಟೊ - 1 (ಸಣ್ಣಗೆ ಹೆಚ್ಚಿ)
ಕಡ್ಲೆ (Kabuli Chana)- 1 ½ ಕಪ್
ತೆಂಗಿನಕಾಯಿ - 1 ಕಪ್ ತುರಿದು


ಮಸಾಲೆಗೆ:
ಎಣ್ಣೆ - ½ ಚಮಚ
ಮೆಂತೆ - ¼ ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ - 1 ಚಮಚ
ಹಳದಿ ಪುಡಿ - ಚಿಟಿಕೆ

ಒಗ್ಗರಣೆಗೆ:
ಎಣ್ಣೆ - 1 ಚಮಚ
ಸಾಸಿವೆ- ½ ಚಮಚ
ಬೆಳ್ಳುಳ್ಳಿ - 2 ದೊಡ್ಡ ಎಸಳು

ಒಣ ಮೆಣಸು - 1
ಕರಿಬೇವು - 6 ಎಲೆ


ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಮೆಂತೆಯನ್ನು ಸ್ವಲ್ಪಕೆಂಪಗೆ ಆಗುವಷ್ಟು ಹುರಿದು ನಂತರ ಇದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹದ ಉರಿಯಲ್ಲಿ ಹುರಿಯಿರಿ. ಮೆಣಸನ್ನು ಪ್ರತ್ಯೇಕ ಹುರಿದಿಟ್ಟುಕೊಳ್ಳಬಹುದು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತಣ್ಣಗಾದ ನಂತರ ಮಸಾಲೆಯನ್ನು ನೀರು ಸೇರಿಸದೆ ಪುಡಿ ಮಾಡಿ.

ಕಡ್ಲೆಯನ್ನು 6-8 ಗಂಟೆ ನೀರಿನಲ್ಲಿ ನೆನೆಸಿಟ್ಟು ತೊಳೆದು ಕುಕ್ಕರಿನಲ್ಲಿ ½ ಚಮಚ ಉಪ್ಪು ಸೇರಿಸಿ ಬೇಯಿಸಿ.
ಇನ್ನೊಂದು ಪಾತ್ರೆಯಲ್ಲಿ, 2 ಚಮಚ ಎಣ್ಣೆ ಸೇರಿಸಿ, ಈರುಳ್ಳಿ ಸೇರಿಸಿ ಸ್ವಲ್ಪ ಕೆಂಪಗೆ ಆಗುವ ತನಕ ಹುರಿಯಿರಿ, ನಂತರ ಇದಕ್ಕೆ ಟೊಮೇಟೊ, ತೊಂಡೆಕಾಯಿ ಹಾಗು 1/4 ಕಪ್ ನೀರು ಸೇರಿಸಿ ಹದವಾಗಿ ಬೇಯಿಸಿ. ತೊಂಡೆಕಾಯಿ ಬೇಯುತ್ತ ಬಂದಾಗ, ಇದಕ್ಕೆ ಮಸಾಲೆ ಪುಡಿ, ಕಡ್ಲೆ, ತೆಂಗಿನತುರಿ, ಉಪ್ಪು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿ.
ಪಲ್ಯಕ್ಕೆ 10 ರಿಂದ 15 ಗೋಡಂಬಿಯನ್ನು ಹುರಿದು ಸೇರಿಸಿದರೆ ತುಂಬಾ ರುಚಿಯಾಗಿರುತ್ತದೆ.
ಹುರಿದು ಹದವಾಗಿ ಪುಡಿಮಾಡಿದ ಮಸಾಲೆ

ಇಲ್ಲಿ ಉತ್ತಮ ಗುಣ ಮಟ್ಟದ ಬ್ಯಾಡಗಿ ಮೆಣಸು ಸಿಗದ ಕಾರಣ ನಾನು ಮಸಾಲೆಯ ಪುಡಿಗಳನ್ನು ಮೆಣಸು ಸೇರಿಸದೆ ಹುರಿದು ಪುಡಿಮಾಡಿಟ್ಟುಕೊಳ್ಳುತ್ತನೆ. ಕೊನೆಯಲ್ಲಿ ನನ್ನ ಪ್ರೀತಿಯ ಅತ್ತೆ ಊರಿನಿಂದ ಕಳಿಸಿದ ಬ್ಯಾಡಗಿ ಮೆಣಸಿನ ಪುಡಿಯನ್ನು ಬಳಸುತ್ತೇನೆ.



ವಿಷು ಅಥವಾ ಸೌರಮಾನ ಯುಗಾದಿ ಎಂದರೆ ನನಗೆ ನೆನಪಾಗುವುದು ನನ್ನೂರು, ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮ 'ಕಯ್ಯಾರು', ಅದೇ ಹಿರಿಯ ಕವಿಗಳ ಹೆಸರಲ್ಲಿರೋ ಊರು. ಕೇರಳಿಗರ ಪ್ರಭಾವವೋ ತಿಳಿಯದು, ಇಲ್ಲಿರುವ ಹೆಚ್ಚಿನ ಹಿಂದೂಗಳೆಲ್ಲರೂ ಆಚರಿಸುವ ಹೊಸ ವರುಷದ ಹಬ್ಬ, ವಿಷು (ಬಿಸು = ತುಳು), ಅಥವಾ ಸೌರಮಾನ ಯುಗಾದಿ. ವಿಷು ಹಬ್ಬದಂದು ಅಮ್ಮ ಬೆಳಗ್ಗೆ ಎದ್ದು ಮನೆಯೆಲ್ಲ ಶುಚಿ ಮಾಡಿ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವುಗಳೊಂದಿಗೆ ಅಕ್ಕಿ ಮತ್ತು ಕನ್ನಡಿ - ಇವೆಲ್ಲವನ್ನೂ ದೀಪದೊಂದಿಗೆ ದೇವರ ಕೋಣೆಯಲ್ಲಿ ಸಿದ್ದಪಡಿಸುತ್ತಾರೆ. ಇದನ್ನೇ ವಿಷುಕಣಿ ಎನ್ನುವುದು. ಬೆಳಿಗ್ಗೆದ್ದು ವಿಶುಕಣಿ ನೋಡಿ ನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ ಮಾಡಿ ಅವರ ಆಶೀರ್ವಾದ ಹಾಗೂ ಬಳುವಳಿ ಪಡೆಯುವ ದಿನ. ಅಂತೆಯ ಬೇರೆ ಊರಿನಲ್ಲಿರುವ ಹೆಣ್ಣು ಮಕ್ಕಳು, ತಂದೆ-ತಾಯಿ ಅಥವಾ ಅಣ್ಣನ ಮನೆಗೆ ಬಂದು ಆಶೀರ್ವಾದ ಪಡೆಯುತ್ತಾರೆ. ನಂತರ ಎಲ್ಲರೂ ಮನೆಯಲ್ಲಿ ಸೇರಿ ಮದ್ಯಾಹ್ನದ ಸಿಹಿ ಊಟ..ಅದರಂತೆಯೇ ಹಲವು ವರ್ಷಗಳಿಂದ ನಮ್ಮೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆದ ಆತ್ಮೀಯ ಕೆಲಸದವರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಂದು ಆಚರಣೆಯಲ್ಲಿ ಪಾಲ್ಗೊಳುತ್ತಾರೆ.


ಹಲವು ವಿಷು ಹಬ್ಬ ಕಳೆದು ಹೋದರು ಕೂಡಾ ಅದರ ಸಿಹಿ ನೆನಪುಗಳು ಮಾಸಿಲ್ಲ....ಜೊತೆಗೆ ನಮ್ಮೊಂದಿಗಿದ್ದ ಆತ್ಮೀಯ ಹಿರಿಯರ ಅಗಲಿಕೆಯ ಕಹಿ ನೆನಪುಗಳು ....


ಏಪ್ರಿಲ್ ೧೪ ರಂದು ವಿಷು ಹಬ್ಬ (ಸೌರಮಾನ ಯುಗಾದಿ) ವನ್ನು ಆಚರಿಸುವ ಎಲ್ಲ ಮಿತ್ರರಿಗೂ ನನ್-ಪ್ರಪಂಚದ ಶುಭಾಶಯಗಳು.


Tuesday, March 16, 2010

ಹೋಳಿಗೆ / HOLIGE

ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ

ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ

ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.

ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.

ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.

ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.


ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.

Saturday, January 16, 2010

ಮ್ಯಾಕರೋನ್ಸ್ / CASHEW MACAROONS


ದಕ್ಷಿಣ ಕನ್ನಡ, ಕಾಸರಗೊಡು ಸಮೀಪ ಬೆಳೆಯಲಾಗುವ ಒಂದು ಪ್ರಮುಖ ವಾಣಿಜ್ಯ ಬೆಳೆ - ಗೇರು.
ಬಾಲ್ಯದಲ್ಲಿ ಗೇರುಹಣ್ಣನ್ನು ಉಪ್ಪು ಹಾಕಿ ತಿನ್ನುವುದೆಂದರೆ ಏನೋ ವಿಶೇಷ ಸಂಬ್ರಮ. ಅಂತೆಯೇ ಮಂಗಳೂರಿನಲ್ಲಿ ಯುಗಾದಿ ಆಚರಣೆಯಲ್ಲಿ ತಯಾರಿಸಲಾಗುವ ಖಾದ್ಯಗಳಲ್ಲಿ ಹಸಿ ಗೋಡಂಬಿ ತಿರುಳಿನಿಂದ ತಯಾರಿಸಲಾಗುವ ಪಲ್ಯ, ಪಾಯಸಗಳಿಗೆ ಪ್ರಮುಖ ಆದ್ಯತೆ.

ಒಣ ಗೋಡಂಬಿಯನ್ನು ಸಿಪ್ಪೆಯಿಂದ ಬೇರ್ಪಡಿಸಲು ಗೇರುಬೀಜವನ್ನು ಮಣ್ಣಿನ ಪಾತ್ರೆಯಲ್ಲಿ ಅಥವಾ ಕೆಂಡದಲ್ಲಿ ಹುರಿಯಬೇಕು. ಇದರ ಸಿಪ್ಪೆಯಿಂದ ಹೊರಸೂಸುವ ಎಣ್ಣೆಯಲ್ಲಿ ಚರ್ಮಕ್ಕೆ allergyಯಾಗುವಂತಹ ಅಸಿಡ್ ಗಳಿರುತ್ತದೆ. ತಣ್ಣಗಾದ ನಂತರ ಗೋಡಂಬಿ ತಿರುಳನ್ನು ಸಿಪ್ಪೆಯಿಂದ ಬೇರ್ಪಡಿಸಬೇಕು. ಈ ರೀತಿ ಬಿಸಿ ಬಿಸಿ ತೆಗೆದ ಗೋಡಂಬಿ ತಿನ್ನಲು ಬಹಳ ರುಚಿ.

ಮಂಗಳೂರಿನ ಬೇಕರಿಗಳಲ್ಲಿ ಈ ಗೋಡಂಬಿ
ಮತ್ತು ಮೊಟ್ಟೆಯಿಂದ ತಯಾರಿಸಲಾಗುವ 'ಮ್ಯಾಕರೋನ್ಸ್ ' (Cashew Macaroons) ಎಂಬ ಸಿಹಿ ತಿಂಡಿ ಬಹಳ ಹೆಸರುವಾಸಿ. ಬಹಳಷ್ಟು ಜನರಿಗೆ ಈ ಸಿಹಿತಿಂಡಿ ಮಾಡಲು ಮೊಟ್ಟೆ ಉಪಯೋಗಿಸುತ್ತಾರೆ ಎಂದು ತಿಳಿದಿರಲಿಕ್ಕಿಲ್ಲ..ಇದನ್ನು ತಯಾರಿಸುವುದು ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:
ಮೊಟ್ಟೆಯ ಬಿಳಿ ಭಾಗ - 2 ಮೊಟ್ಟೆಯಿಂದ ಸ್ವಲ್ಪ ಕೂಡ ಹಳದಿ ಭಾಗ ಬರದಂತೆ ಬೇರ್ಪಡಿಸಬೇಕು
ಸಕ್ಕರೆ - 3/4 ಕಪ್
ಗೋಡಂಬಿ - 3/4 ಕಪ್ (ಗೋಡಂಬಿಯನ್ನು ಮಿಕ್ಸಿ ಯಲ್ಲಿ
ಹಾಕಿ ಸ್ವಲ್ಪ ಪುಡಿ ಮಾಡಬೇಕು )
ವೆ
ನಿಲ್ಲ ಎಸ್ಸೆನ್ಸ್ - 1/4 ಚಮಚ
ಲಿಂಬೆ ರಸ -
1/4 ಚಮಚ
ಉಪ್ಪು - ಚಿಟಿಕೆ

ಮಾಡುವ ವಿಧಾನ :

ಒಂದು ಪಾತ್ರೆಗೆ ಲಿಂಬೆ ರಸವನ್ನು ಒಳಗಿನಿಂದ ಸವರಿಕೊಂಡು ಇದರಲ್ಲಿ ಮೊಟ್ಟೆಯ
ಬಿಳಿಭಾಗ
ಮತ್ತು ಚಿಟಿಕೆ ಉಪ್ಪು ಸೇರಿಸಿಕೊಂಡು electric egg beater
ನಲ್ಲಿ low speedನಲ್ಲಿ 2-3 ನಿಮಿಷ ಹಾಗು high speedನಲ್ಲಿ 3ನಿಮಿಷದಷ್ಟು ಮಿಕ್ಸ್ ಮಾಡಿದರೆ, ಈ ಮಿಶ್ರಣವು ದಪ್ಪದ ಹಿಟ್ಟಿನ ಹದಕ್ಕೆ ಬಂದಿರುತ್ತದೆ. ಇದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸುತ್ತಾ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಗೋಡಂಬಿ ಪುಡಿಯನ್ನು ಸೇರಿಸಿಕೊಂಡು ಒಂದು ಚಮಚದಲ್ಲಿ ನಿದಾನದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು.
ಒಂದು ಚಮಚದಷ್ಟು ಈ ಮಿಶ್ರಣವನ್ನು ಒಂದು ಬೇಕಿಂಗ್ ಶೀಟ್ ನ ಮೇಲಿಟ್ಟು ಮೊದಲೇ ಆನ್ ಮಾಡಿದ ಓವೆನ್ ನ ಮಧ್ಯದ
rackನಲ್ಲಿಟ್ಟು 325F ನಲ್ಲಿ 15-20 ನಿಮಿಷ ಬೇಯಿಸಿರಿ.
ಓವೆನ್ ನಿಂದ ತೆಗೆದಾಗ ಮ್ಯಾಕರೋನ್ಸ್
ತುಂಬಾ ಸಾಫ್ಟ್ ಆಗಿರುತ್ತದೆ. ಅರ್ಧ ಗಂಟೆಯ ನಂತರ, ಸ್ವಲ್ಪ ತಣ್ಣಗಾದ ಮೇಲೆ ಬೇಕಿಂಗ್ ಶೀಟ್ ನಿಂದ ಬೇರ್ಪಡಿಸಿ ಒಂದು ಡಬ್ಬದಲ್ಲಿ ತುಂಬಿ ಫ್ರಿಜ್ ನಲ್ಲಿಟ್ಟು ಬೇಕಾದಾಗ ಸವಿಯಿರಿ.
ಈ ರೀತಿ 10- 15 ಮ್ಯಾಕರೋನ್
ನ್ನು ಮಾಡಬಹುದು.
ಗೋಡಂಬಿಯ ಬದಲು ನೆಲ ಕಡಲೆ ಕೂಡ
ಉಪಯೋಗಿಸಬಹುದು.

ಉಪಯುಕ್ತ ಮಾಹಿತಿಯುಳ್ಳ ವೆಬ್ ಸೈಟ್ ಗಳು,
Tuticorin Cashew macaroon
coconut macaroons


ನನ್ - ಪ್ರಪಂಚದ ಓದುಗರಿಗೆಲ್ಲ ಹೊಸವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತಾ,
ವನಿತಾ.


Tuesday, December 8, 2009

ನೀರು ದೋಸೆ ಮತ್ತು ಸೌತೆಕಾಯಿ ದೋಸೆ (neer Dose & Southekayi Dose)

ನೀರು ದೋಸೆ ಮಂಗಳೂರಿಗರ ಫೇವರಿಟ್ ದೋಸೆ. ಇದರ ಹಿಟ್ಟು ಉಳಿದ ದೋಸೆ ಹಿಟ್ಟಿಗಿಂತ ತುಂಬಾ ತೆಳ್ಳಗಾಗಿರುವ ಕಾರಣ ಈ ಹೆಸರು. ಇನ್ನೊಂದು ವಿಶೇಷ ಎಂದರೆ ಇದನ್ನು ಅಕ್ಕಿ ರುಬ್ಬಿದ ತಕ್ಷಣವೇ ಮಾಡಬೇಕು.


ಸಾಮಗ್ರಿಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – ¼ ಕಪ್ (ತೆಂಗಿನ ತುರಿ ಸೇರಿಸದೆ ಕೂಡ ಮಾಡಬಹುದು)
ಉಪ್ಪು – ¾ ಚಮಚ / ರುಚಿಗೆ ತಕ್ಕಷ್ಟು
ನೀರು – 1 ½ ಕಪ್ ನಷ್ಟು

ವಿಧಾನ:

ಅಕ್ಕಿಯನ್ನು ಮುಳುಗವಷ್ಟು ನೀರಿನಲ್ಲಿ 6-8 ಗಂಟೆ ನೆನೆಸಿರಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ತೆಂಗಿನ ತುರಿ ಹಾಗು ½ ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ನಯವಾಗಿ ರುಬ್ಬಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗು 1 ಕಪ್ ನಷ್ಟು ನೀರು ಸೇರಿಸಿ ಹಿಟ್ಟನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.

ಎಣ್ಣೆ ಸವರಿದ ಕಾದ ಕಾವಲಿಯಲ್ಲಿ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ದೋಸೆಯನ್ನು ಮಾಡಬೇಕು. ಈ ದೋಸೆಯನ್ನು ಪುನ: ಮಗುಚಿ ಹಾಕುವ ಅಗತ್ಯ ಇರುವುದಿಲ್ಲ.

ಸಾಮಾನ್ಯವಾಗಿ, ನೀರುದೋಸೆ ಮಾಡುವಾಗ ಕಾವಲಿಯ ಒಂದು ಕೊನೆಯಲ್ಲಿ ಹಿಟ್ಟನ್ನು ಹಾಕಿ, ಕಾವಲಿಯನ್ನು ಕೈಯಿಂದ ಅಲ್ಲಾಡಿಸಿದರೆ ದೋಸೆಹಿಟ್ಟು ಇಡೀ ಕಾವಲಿಯಲ್ಲಿ ಹರಡಿಕೊಳ್ಳುತ್ತದೆ. ಈ ರೀತಿ ಮಾಡಲು ಹೊಸಬರಿಗೆ ಕಷ್ಟವಾದುದರಿಂದ, ದೋಸೆ ಹಿಟ್ಟನ್ನು ಮಧ್ಯದಲ್ಲಿ ಉಳಿದ ದೋಸೆಯಂತೆಯೇ ಹಾಕಿಕೊಂಡು ಮಾಡಬಹುದು. ಅದರ ಸಣ್ಣ ತುಣುಕನ್ನು ಈ ಕೊಂಡಿಯಲ್ಲಿ ನೋಡಬಹುದು.



A Variation : ಸೌತೆಕಾಯಿ ದೋಸೆ

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್

1 ಸಣ್ಣ ಸೌತೆಕಾಯಿ(=ಮುಳ್ಳುಸೌತೆಕಾಯಿ)
ಉಪ್ಪು – ರುಚಿಗೆ ತಕ್ಕಷ್ಟು
ನೀರು

ವಿಧಾನ :
ಎಳೆ ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಅಕ್ಕಿಯೊಂದಿಗೆ ರುಬ್ಬಿಕೊಂಡು, ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಬೇಕು. ಸೌತೆಕಾಯಿಯು ದೋಸೆಗೆ ಒಳ್ಳೆಯ ಪರಿಮಳ ಹಾಗು ರುಚಿಯನ್ನು ಕೊಡುತ್ತದೆ.

ಹೆಚ್ಚಾಗಿ ಈ ದೋಸೆಗಳನ್ನು ತೆಂಗಿನ ಕಾಯಿ ಚಟ್ನಿ, ಅಥವಾ ಕಾಯಿತುರಿ-ಬೆಲ್ಲದ ಮಿಶ್ರಣದೊಂದಿಗೆ ತಿನ್ನುವುದು ವಾಡಿಕೆ.

ಒಂದು ವರ್ಷದ ಹಿಂದೆ ಈ " ನನ್- ಪ್ರಪಂಚ" ವನ್ನು ಕುತೂಹಲ, ಉತ್ಸಾಹದಿಂದ ಶುರು ಮಾಡಿದ್ದೆ. ಇದು ನನಗೆ ಹಲವಾರು ಸಹೃದಯಿ ಬ್ಲಾಗ್ ಗೆಳೆಯರನ್ನು ಪರಿಚಯಿಸಿದೆ. ಈ ಮೂಲಕ ನನ್ನ ಸಣ್ಣ ಪ್ರಯತ್ನವು ಸ್ವಲ್ಪವಾದರೂ ಉಪಯೋಗವಾದಲ್ಲಿ ತುಂಬಾ ಸಂತೋಷ..ಇದುವರೆಗೆ ಪ್ರೋತ್ಸಾಹಿಸಿದ ಎಲ್ಲ ಆತ್ಮೀಯರಿಗೆ ನಾನು ಆಭಾರಿ. ಹಾಗೆಯೇ ಮುಂದೆಯೂ ಕೂಡ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ವನಿತಾ.

Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

Tuesday, July 28, 2009

Gendadadya / Kendadadya - ಕೆಂಡದಡ್ಯ / ಗೆಂಡದಡ್ಯ

Gendadadya or Kendadadya is a traditional delicacy of Mangalore. Genda (=tulu) or Kenda (=Kannada) reffers to ‘burning charcoal’ and Adya is ‘Kadubu or steamed rice dumpling/cake’. The name Kendadadya derives from the way it is prepared. Unlike other preparations, the speciality of this dish is that, it is baked on both the sides (top & bottom).


The main ingredients needed for this dish are cucumber, rice, jaggery, coconut and oil/Ghee. The batter prepared with the mentioned ingredinets is poured on a flat earthen vessel placed on a traditional fire place (called Ole in Kannada /Chula in Hindi). Another earthen vessel filled with hot red burning charcoal is placed just above the batter. The bottom vessel is heated using a slow and steady flame with a non smoky wood.


The blend of oil (preferably coconut oil), coconut, cucumber and Jaggery gives an amazing flavour to this dish. This is a great evening snack along with hot Coffee or Tea. This dish is slowly getting extinct our villages because of the fact that preparation method needs lot of skills interms of two side cooking and time required for the preparation. Here I have tried to adopt a simple and convenient method to make this preparation.





Ingredients:
White Rice - 2 cups
Grated cucumber - ~2 cup (In general, yellowish, ready to ripe cucumbers are being used. I have used 2 green cucumbers)
Jaggery - ½ - ¾ cup scrapped (can be changed according to your taste)
Grated cocnut – ¼ cup
Salt- ½ spoon
Oil or Ghee – 3-4 table spoon

Preperation:
1. Soak rice in sufficient amount of water for 4-5 hours.
2. Peel and grate the cucumber.
3. Squeeze the grated cucmber by hand and take out maximum amount of water. This water can be used for grinding rice.
4. Now grind rice by adding minimum amount of cucumber water. (Once you add Jaggery, the batter turns out watery, so try to use minimum amount of water).
5. To this thick ground rice batter, add scrapped Jaggery, coconut, salt and grated cucumber and mix nicely. The consistency should be thicker than Idly batter.
5. Centre a rack in the oven and preheat the oven to 400F
6. Add 2 tablespoon of oil in a baking pan (I have used 8x4x2 inch pan) and pour the batter. Cover the top with a thin layer of oil. At this point fried onion slices can also be sprinkled at the top.
7. Bake this for 40 - 45 minutes. Kendadadya is ready when it turns golden brown color.
8. Once cooled, Slice it using a long knife, and enjoy with hot tea or Coffee.

Serves- 10-12 Pieces




Sending this to RCI-UDUPI & MANGALOREAN CUISINE hosted by SIA an event started by LAKSHMI.


ಕೆಂಡದಡ್ಯ / ಗೆಂಡದಡ್ಯ [ಕೆಂಡ (=ಕನ್ನಡ); ಗೆಂಡ (=ತುಳು); ಅಡ್ಯ = ಕಡುಬು (ತುಳು)] :
ಮಳೆಗಾಲ ಬಂತೆಂದರೆ ಮಂಗಳೂರಿನಲ್ಲಿ ಹೆಚ್ಚಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿಯೂ ಸೌತೆಕಾಯಿ (ಮಂಗಳೂರುಸೌತೆ), ಮುಳ್ಳುಸೌತೆ (ಸೌತೆಕಾಯಿ), ಬೆಂಡೆಕಾಯಿ, ತೊಂಡೆಕಾಯಿ, ಸೋರೆಕಾಯಿ, ಪಡುವಲಕಾಯಿ, ಹೀರೆಕಾಯಿ, ಅಲಸಂಡೆ ಮುಂತಾದ ತರಕಾರಿಗಳನ್ನು ಬೆಳೆಸುತ್ತಾರೆ. ಚೆನ್ನಾಗಿ ಬಲಿತ (ಹಣ್ಣಾಗಲು ತಯಾರಾದ, ಹಳದಿ ಬಣ್ಣದ) ಮುಳ್ಳುಸೌತೆ ಕೆಂಡದಡ್ಯ ಮಾಡಲು ಉತ್ತಮ. ಈ ತಿಂಡಿಯ ವಿಶೀಷತೆಯೆಂದರೆ, ಇದನ್ನು ಮೇಲೆ ಹಾಗು ಕೆಳಗೆ ಎರಡೂ ಕಡೆಯಿಂದ ಬೇಯಿಸಬೇಕು.
ಸಾಂಪ್ರದಾಯಿಕವಾಗಿ ಕೆಂಡದಡ್ಯ ಮಾಡುವ ವಿಧಾನ ತಲೆತಲಾಂತರಗಳಿಂದ ಬಂದುದು. ಇದನ್ನು ಹೆಚ್ಚಾಗಿ ದಪ್ಪ ತಳದ ಮಣ್ಣಿನ ಪಾತ್ರೆಯಲ್ಲಿ ಮಾಡುತ್ತಾರೆ. ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಮಿಶ್ರಣವನ್ನು ಹರಡಿ, ಈ ಮಿಶ್ರಣದ ಸ್ವಲ್ಪವೇ ಮೇಲ್ಭಾಗದಲ್ಲಿ ಇನ್ನೊಂದು ಪಾತ್ರೆಯನ್ನಿಟ್ಟು ನಿಗಿನಿಗಿಸುವ ಕೆಂಡವನ್ನು ಮೇಲಿನ ಪಾತ್ರೆಯಲ್ಲಿ ತುಂಬುತ್ತಾರೆ. ಇದೇ ಸಮಯದಲ್ಲಿ ಕೆಳಭಾಗದ ಪಾತ್ರೆಯನ್ನು ಸ್ವಲ್ಪ ಉರಿಯಲ್ಲಿ ಅಥವಾ ಕೆಂಡದಲ್ಲಿ ಹದವಾಗಿ ಬೇಯಿಸಲಾಗುತ್ತದೆ.
ಹೀಗೆ ತಯಾರಾದ ಈ ತಿಂಡಿಯ ರುಚಿಯನ್ನು ಓವೆನ್ ನಲ್ಲಿ ಮಾಡಿದರೆ ಬರಲು ಸಾಧ್ಯವಿಲ್ಲವಾದರೂ, ಓವೆನ್ ವಿಧಾನ ನಗರದ ಅಡುಗೆ ಮನೆಯಲ್ಲೂ ಮಾಡಲು ಸುಲಭ.

ಕೆಂಡದಡ್ಯ / ಗೆಂಡದಡ್ಯ ಮಾಡಲು ಬೇಕಾಗುವ ಸಾಮಗ್ರಿಗಳು:

ಅಕ್ಕಿ - 2 ಕಪ್
ಮುಳ್ಳುಸೌತೆ / ಸೌತೆಕಾಯಿ - 2 ಕಪ್, ತುರಿದು
ಬೆಲ್ಲ - ½ - ¾ ಕಪ್ (ಸಿಹಿಗೆ ಹೊಂದಿಕೊಂಡು)
ತೆಂಗಿನಕಾಯಿ - ¼ ಕಪ್, ತುರಿದು
ಉಪ್ಪು - ½ - ಚಮಚ
ಎಣ್ಣೆ / ತುಪ್ಪ - 3-4 ಟೇಬಲ್ ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ
ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು.
ನಂತರ ತುರಿದ ಸೌತೆ ಕಾಯಿ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಈ ಮಿಶ್ರಣದಲ್ಲಿ ನೀರಿನ ಅಂಶ ಹೆಚ್ಚಾಗದಂತೆ ತುಂಬಾ ಎಚ್ಚರ ವಹಿಸಬೇಕು.
ಒಂದು ಓವೆನ್ ನಲ್ಲಿ ಇಡಬಹುದಾದ ಪಾತ್ರೆಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಕಲಸಿಟ್ಟ ಅಕ್ಕಿ ಮಿಶ್ರಣವನ್ನು ಸುರಿಯಬೇಕು. ಇದರ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಲ್ಲಾ ಭಾಗಕ್ಕೆ ಹರಡಬೇಕು. ಬೇಕಿದ್ದರೆ ಹುರಿದ ಈರುಳ್ಳಿಯನ್ನು ಸೇರಿಸಬಹುದು.
ಈ ಪಾತ್ರೆಯನ್ನು ಓವೆನ್ ನ ಮಧ್ಯದ rackನಲ್ಲಿಟ್ಟು 400Fನಲ್ಲಿ 40-45 ನಿಮಿಷ ಬೇಯಿಸಬೇಕು.
ಬೇಕಿದ್ದರೆ 30ನಿಮಿಷದ ನಂತರ ಕೆಂಡದಡ್ಯವನ್ನು ಮಗುಚಿ ಪುನ ಬೇಯಿಸಬಹುದು.
ಚೆನ್ನಾಗಿ ಬೆಂದ ಕೆಂಡದಡ್ಯದ ಮೇಲ್ಭಾಗ ಹೊಂಬಣ್ಣಕ್ಕೆ ತಿರುಗಿರುತ್ತದೆ. ಸ್ವಲ್ಪ ತಣ್ಣಗಾದ ನಂತರ ಇದನ್ನು ತುಂಡು ಮಾಡಿಕೊಂಡು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಲು ಕೊಡಿ.

ಈ ತಿಂಡಿ ಹಳ್ಳಿಯಲ್ಲೂ ಈಗ ಕಾಣಸಿಗಲು ಕಷ್ಟವಾಗಿದೆ. ಅಂಥಹ ನಶಿಸುತ್ತಿರುವ ತಿಂಡಿ ಕೆಲವಾದರೂ ಅಡುಗೆ ಮನೆಗಳಲ್ಲಿ ಮತ್ತೆ ಕಾಣಬಂದರೆ ತುಂಬಾ ಸಂತೋಷ..
(ಮಂಗಳೂರಿನ ಎ. ಬಿ. ಶೆಟ್ಟಿ ಸರ್ಕಲ್ ಬಳಿ ಇರುವ Kochin Bakeryಯಲ್ಲಿ ಒಳ್ಳೆಯ ಕೆಂಡದಡ್ಯ ಸಿಗುತ್ತದೆ)

Friday, February 27, 2009

ಮಂಗಳೂರು ಬನ್ಸ್ (Mangalore Buns)

ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು - 1
ಮೈದಾ ಹುಡಿ - 1.5 ಕಪ್
ಮೊಸರು - ½ ಕಪ್
ಸೋಡಾ ಪುಡಿ - ½ ಚಮಚ
ಜೀರಿಗೆ - ½ ಚಮಚ
ಸಕ್ಕರೆ - 4-5 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು.
ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು, ಪೂರಿಯ ರೀತಿಯಲ್ಲಿ (೧ ರಿಂದ ೧.೫ ಇಂಚು ದಪ್ಪಕ್ಕೆ) ಲಟ್ಟಿಸಬೇಕು. ಇದನ್ನು ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಹಿಟ್ಟು ಅಥವಾ ಕೈಗೆ ಸ್ವಲ್ಪಎಣ್ಣೆ ಹಾಕಿಕೊಂಡರೆ ಒಳ್ಳೆಯದು.
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ವರೆಗೆ ಕರಿಯಬೇಕು.
ಇದನ್ನು ಚಟ್ನಿ, ಸಾಂಬಾರ್ ಜೊತೆಗೆ ಅಥವಾ ಹಾಗೆಯೇ ತಿನ್ನಬಹುದು.

Sunday, February 1, 2009

ಗೋಳಿ ಬಜೆ / ಮಂಗಳೂರು ಬಜ್ಜಿ (Golibaje / Mangalore Bajji)

ನೀವು ಮಂಗಳೂರಿನ ಯಾವುದೇ ಹೋಟೆಲ್ ಗೆ ಹೋಗಿ ತಿಂಡಿ ಏನಿದೆ..? ಎಂದು ಕೇಳಿದರೆ, ಹೀಗೆ ಶುರುವಾಗುತ್ತದೆ..ಗೋಳಿಬಜೆ, ನೀರುಳ್ಳಿ ಬಜೆ, ಮಂಗಳೂರು ಬನ್ಸ್, ಸೆಟ್ ದೋಸೆ, ಮಸಾಲೆ ದೋಸೆ...... ಮಂಗಳೂರಿನಲ್ಲಿ ಗೋಳಿ ಬಜೆ ಮತ್ತು ಬಿಸಿ ಬಿಸಿ ಕಾಫಿ/ಚಾ ಬಲು ಪ್ರಸಿದ್ದ. ಅದೇ ಬೆಂಗಳೂರು/ಮೈಸೂರಿನ ಹೋಟೆಲಿಗೆ ಹೋದರೆ, ಇದೇ ಗೋಳಿಬಜೆಗೆ ಮಂಗಳೂರು ಬಜ್ಜಿ ಎನ್ನುತ್ತಾರೆ.

ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು
ಮೈದಾ ಹುಡಿ - 1 ಕಪ್
ಮೊಸರು/ ದಪ್ಪ ಮಜ್ಜಿಗೆ - 1/2 ಕಪ್
ಶುಂಠಿ - 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು - 1 ಚಮಚ (ಸಣ್ಣಗೆ ಹೆಚ್ಚಿ)
ಕರಿ ಬೇವು - 5-6 (ಸಣ್ಣಗೆ ಹೆಚ್ಚಿ)
ಹಿಂಗು - ಸ್ವಲ್ಪ
ಬೇಕಿಂಗ್ ಸೋಡಾ - ½ ಚಮಚ
ಸಕ್ಕರೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಮಾಡಿಟ್ಟುಕೊಂಡು, 15-20 ನಿಮಿಷ ಮುಚ್ಚಿ ಇಡಬೇಕು. ನಂತರ ಸಣ್ಣದಾದ ಉಂಡೆ ಮಾಡಿಕೊಂಡು, ಕಾದ ಎಣ್ಣೆ ಗೆ ಹಾಕಿ, ಚೆನ್ನಾಗಿ ಕೆಂಬಣ್ಣ ಬರುವ ತನಕ ಕರಿಯಬೇಕು. ಇದನ್ನು ತೆಂಗಿನ ಕಾಯಿ ಚಟ್ನಿ ಯೊಂದಿಗೆ ಬಿಸಿಬಿಸಿ ಸವಿಯಬೇಕು.